ಗುರುವಾರ, ಆಗಸ್ಟ್ 4, 2011

ಮಂಜಿನ ಸಂಜಿ


ಪವಿತ್ರವಾದ ಮನಸುಗಳು. ಅದು ಪ್ರಶಾಂತ ಪ್ರಯಾಣ. ಶುಭದಾಯಕ ಕಾಯಕ. ಸುಂದರ ಕಥನಕ್ಕಿಷ್ಟು ಸಾಕ ? ಮಂಜಿನ ಹನಿ ಬೇಕಾ ? ಬೇಕಿತ್ತು. ಅದು ಮಂಜಿನ ಹನಿಗಳೇ ಮುತ್ತಾದ ಹೊತ್ತು. ಅಲ್ಲೆನ್ನ ಮೌನವಿತ್ತು.ಮನದಲ್ಲೇ ಮಿಡಿತವಿತ್ತು.

ಸದ್ದು ಮಾಡಿದ ಸುದ್ದಿ. ನಿಶ್ಚಲವಾಗಹೊರಟ ಮನಸು ವಿಚಲವಾದಾಗ, ಒಂಟಿತನಕೆ, ಇಲ್ಲದಿತ್ತೆ ಜಂಟಿಬಯಕೆ ? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಸಹಜತೆ ಬೆನ್ನೇರಿ ಸ್ನೇಹಿತೆ. ಒಂದು ಒಳ್ಳೆಯ ಕೆಲಸ. ಇದಕ್ಕೆ ಹಲವು ಕೈಗಳು. ಇಲ್ಲಿ ನನ್ನದೊಂದು ಉಗುರು ಗುರುತು ಎಂಬ ಹೆಮ್ಮೆ. ಈ ಪಯಣಕ್ಕೆ ಕಾರಣವೇ 'ಹೂವಿನ ಜೊತೆ ನಾರು ಸ್ವರ್ಗ ಸೇರಿತು'ಎಂಬ ಕೆಲಸ. ಸ್ನೇಹಿತೆಯ ನಿರರ್ಗಳ ಮಾತು, ಮನದಲ್ಲೇ ಕೂತು ಇರಲಾಗದೆ ಚಿಮ್ಮುತ್ತಿತ್ತು - ಸಾರಂಗದಂತೆ. ಚರ್ಚಿಸುತ್ತಿತ್ತು - ವಿಮರ್ಶಕನಂತೆ. 


ಸಮಾಜ ಕೊಳಕಿದೆ. ಹೌದು. ಇಲ್ಲವೆಂದು ಈಗಳೆವವರಾರು ? ಇಲ್ಲಿಯೇ ನಾವಿದ್ದೇವೆ. ನಿಜ. ಇದಿನ್ನೂ ಕಟು ಸತ್ಯ. ಈ ಸತ್ಯದೊಳಗೆ ಅಪಥ್ಯ ಕಥೆ ಹೀಗೇನೆ. ಹೆಸರಿಗೆ ಅಧಿಕಾರಿ. ಅಂತೆಯೇ ಮಹದುಪಕಾರಿ. ಪರೋಪಕಾರಿ. ಜೊತೆಗೆ ಆದರ್ಶಗಳ ಸವಾರಿ. ಇವಕ್ಕೆಲ್ಲ ಇಲ್ಲೆಲ್ಲಿದೆ ಜಾಗ ನೀವೇ ಹೇಳಿರೀ ? ಆದರೆ ಒಂದಂತೂ ನಿಜ. ಒಂದಿನಿತು ಇಲ್ಲದೆ ಸಜ, ಬೆಳೆಯಲಾರ ಮುಗಿಲಿನೆತ್ತರಕೆ, ಹೊಳೆಯಲಾರ ಸೂರ್ಯ ನಭಕೆ. 

ಒಳ್ಳೆ ಹುಡುಗರ ದೌರ್ಬಲ್ಯ. ಅದು ಒಂಟಿತನ. ಏಕಾಂತ. ಮೌನಿತ್ವ. ಒಮ್ಮೊಮ್ಮೆ ಹೆಮ್ಮೆ. ಜೊತೆಜೊತೆಗೆ ಕೀಳರಿಮೆ. ಅದು ಸಾಲದಕ್ಕೆ ಹಿರಿಮೆ, ಗರಿಮೆ, ಎಲ್ಲದ್ದಕ್ಕಿಂತ ಒಲುಮೆ. ಬಯಸಿದ ಬಗೆಯಾಕೆ ಸಿಗದಾಗ ಈ ಮನವ್ಯಾಕೆ ? ಎಂಬ ಚಿಂತೆ. ಇದೇ ಖಾವಿಯಾಗುವಂತಹ ಚಿತೆಗೇರಿಸುವ ಕೆಲಸಕ್ಕೆ ಕೈ ಹಾಕಿಸುವುದು. ಅಂತೆಯೇ ಇಲ್ಲಿಯೂ ಗೆಳೆಯರಿಗಾಗಿರುವುದು. ಬಹುಶ ಒಂದು ಒಳ್ಳೆ ಸ್ನೇಹ-ಒಳ್ಳೆ ಮನಸು-ಒಳ್ಳೆ ಹೊಗಳಿಕೆ-ಒಳ್ಳೆಯ ತೆಗಳಿಕೆ ಸಿಗದಾಗ ಈ ರೀತಿ ಆಗುತ್ತೆ. ಅದರಲ್ಲೂ ಒಳ್ಳೆ ಹುಡುಗರಿಗೆ ಒಳ್ಳೆ ಹೆಣ್ಣು ಜೀವದ ಅವಶ್ಯಕತೆ ಇದೆ. ಇದು ಇಲ್ಲದ್ದಾಗ ಇಂತಹ ಘಟನೆ ನಡೆಯುತ್ತವೆ ಎಂದು ನನ್ನನಿಸಿಕೆ. 

ಕಡೆಗೂ, ಮಠದೊಳಗಣ ಬೆಕ್ಕುಇಲಿಯ ಕಂಡು ಪುಟ ನೆಗೆದಂತಾಯ್ತು ಕಾಣಾ ರಾಮನಾಥ...ಎಂಬ ದಾಸಿಮಯ್ಯನ ವಚನದಂತೆ ಅವರು ಬಂದರು. ಆ ನೆನಪ ಇವರು ಹೊತ್ತು ತಂದರು. ಲತೆಯಂತೆ ಮಾತಿಗಿಳಿದು, ಜೊತೆಯಾಗಿ ಊಟಕ್ಕಿಳಿದು, ಕಥೆಯಾಗಿ ಕೆಳಕ್ಕಿಳಿದು ಬಂದೆವು. ನಾನು ಸಹೃದಯ. ಅಂತ ಎಲ್ಲರ ನಂಬಿಕೆ. ಅದೇ ನನಗೆ ಜೀವಂತಿಕೆ. ಅದಕ್ಕೆ ನೆನಪಾಗುತ್ತಿತ್ತು, ನಮ್ಮ ವಿವಿ ಮುಂದಿನ ಶಿಲಾಸ್ತಂಭದಲ್ಲಿದ್ದ "ಉಭಯ ಮಧ್ಯೆ ಚಲಿಪ ವಿದ್ಯೆ ಪೂರ್ಣ ಶೂನ್ಯ ಕುಂಡಲಿನಿ" ಎಂಬ ವ್ಯಾಖ್ಯೆ..

ಗುರುವಾರ, ಜುಲೈ 21, 2011

ತರ ತರ'ಭೀತಿ'


ಟ್ರೈನಿಂಗ್ ಎಂದಾಕ್ಷಣ, ಕುತೂಹಲ, ನಿರೀಕ್ಷೆ,…..ಆದರೆ ಅದೇನೂ ಇರಲಿಲ್ಲ. ಈ ಸಾರಿ ಮೊದಲನೇ ಟ್ರೀನಿಂಗ್ ಆದರೂ ಒಂದು ರೀತಿಯ ಉತ್ಸಾಹವಿರಲಿಲ್ಲ. ಡಿಪಾರ್ಟ್ ಮೆಂಟ್ ನ ದಿಗ್ದರ್ಶನ ಅದಾಗಲೇ ಆಗಿತ್ತು. ಅಂತೆಯೇ ಟ್ರೈನ್ ಹತ್ತಿದೆವು. ಶಶಿ, ತಮ್ಮಯ್ಯ ಮೈಸೂರಿನಿಂದ ಹೊರಟ್ರು. ನಾನು ಕೆ.ಆರ್ ನಗರದಲ್ಲಿ ಹತ್ತಿದೆ. ಜುಲೈ 30ರ ಸಂಜೆ. ಅರಸೀಕೆರೆ ತಲುಪಿ ಅಲ್ಲಿ ತಂಗಿ, ಬೆಳಿಗ್ಗೆ ಜನಶತಾಬ್ದಿ ಹತ್ತಿದೆವು. ಮಧ್ಯಾಹ್ನ ಹುಬ್ಬಳ್ಳಿ. ಅಲ್ಲಿಂದ ಧಾರವಾಡದ ಬಸ್ಸು. ಅದು ಮೊದಲ ಧಾರವಾಡ ಭೇಟಿ. ನೋಡ ನೋಡುತ್ತಿದ್ದಂತೆ ಆ ಜನ, ಖಡಕ್ ಮಾತು ದಾರಿಯಲ್ಲೇ ಪರಿಚಯವಾಯ್ತು. ಕೊಳಕೂ ಕೂಡ. . ಬಹಳ ವರ್ಷ ಕಳೆದ ಮೇಲೆ ಒಬ್ಬ ಒಳ್ಳೆಯ ಮೋಡಿಗಾರ, ಮಾತುಗಾರನನ್ನು ನೋಡಿದೆ. ಜೊತೆ ಜೊತೆಯಾಗಿ ಫೋಟೋ ತೆಗೆಸಿಕೊಂಡೆ. ಖುಷಿಯಿಂದ ಹಿರಿ ಹಿರಿಹಿಗ್ಗಿದೆ. ಅವರೇ ಫ್ರೋ ಹಳ್ಯಾಳ್. ಮನಶಾಸ್ತ್ರಜ್ಞರು. ಅವರ ಮಾತು ನಿಜಕ್ಕೂ ಸೆಳೆಯಿತು. ಅಂತೆಯೇ ಧಾರವಾಡ ಕಮೀಷನರೇಟ್ ನಲ್ಲಿದ್ದ ಹಿರಿಯ ಅಧಿಕಾರಿಗಳ ಸರಳತೆ, ಸಜ್ಜನಿಕೆ ಆದರ್ಶನೀಯವಾಗಿತ್ತು. ಮತ್ತೆ ಕಾರ್ಟೂನ್ ಮುಖಚಹರೆ, ನಿರರ್ಗಳ ಮಾತುಗಾರಿಕೆ, ಕನ್ನಡ-ಹಿಂದಿ-ಇಂಗ್ಲೀಷ್ ಸಾಹಿತ್ಯದೊಳಗಣ ರಸಹೀರಿದ ದುಂಬಿಯಂತೆ ನಮ್ಮಲ್ಲಿದ್ದ ಮಕರಂದ ಹೀರಬಯಸಿದ ವಾಡಪ್ಪಿ ಅವರು, ಅವರೊಳಗಿದ್ದ ಒಬ್ಬ ಶ್ರೇಷ್ಠ ಓದುಗನನ್ನು ಪರಿಚಯಿಸಿದರು. ಓದುವ ಹುಚ್ಚು ಹತ್ತಿಸಿದರು. ಆದರೆ ಅದು ಇಳಿದ ಮಾತು ಬೇರೆ ! ಅಂತೂ, ಹಳೇ ಗೆಳೆಯರೆಲ್ಲಾ ಮತ್ತೆ ಒಂದೆಡೆ ಸೇರಿದ್ದೆವು. ಬಹುತೇಕರೆಲ್ಲರೂ ಡಿಪಾರ್ಟ್ ಮೆಂಟ್ ಬಿಟ್ಟು ಹೊರಬರಲಿಲ್ಲ. ಆದರೆ ನಾ ನನ್ನೊಳಗೇ ಮೌನಿಯಾಗಿದ್ದೆ. ಅಭಿಮಾನಿಗಳು ಕೇಳಿದಾಗ ಗುನುಗುತ್ತಿದೆ. ಹಳೇಯ ಬಿಎಡ್ ದಿನಗಳು ನೆನಪಾಗುತ್ತಿದ್ದೆವು. ಅಂದಹಾಗೆ ಮರೆತಿದ್ದೆ. ಮೊದಲ ಮದುವೆ ನಡೆದು ಮೊದಲ ದಿನ ಕಳೆದಿತ್ತು. ಮರುದಿನವೇ ಟ್ರೈನಿಂಗ್ ಬಂದಿದ್ದರು ನಮ್ಮ ತಮ್ಮಯ್ಯ. ಮೊದಲ ತರಬೇತಿ ದಿನವೇ ಆ ವಿಚಾರ ಗೆಳೆಯರಗುಂಪಿಗೆ ತಿಳಿಯಿತು. ಇಡೀ ಐದೂ ದಿನ ಟ್ರೈನಿಂಗ್ ನಲ್ಲಿ ಅವರೇ ಹೀರೋ....ಮಾತು ಮಾತಿಗೂ ರೇಗಿಸಿ, ಪೇಚಿಗೆ ಸಿಲುಕಿಸಿ ಗೋಳು ಹೊಯ್ದುಕೊಂಡೆವು. ಅವರೇ ತಮ್ಮಯ್ಯ. ಮಾಕೋಡು ಹೆಡ್ ಮಾಸ್ಟರ್. ಅವರ ಮುಗ್ದತೆಗೆ ಎಲ್ಲರೂ ನಕ್ಕು ಅವರ ಸ್ನೇಹಿತರಾದರು. ನಾಳೆ
ಆದರೆ
 
 
ಕಡೆ ದಿನ. ಇವತ್ತೇ ಒಂದು ರೌಂಡ್ ಹೊಡೆಯೋ ಆಸೆ. ಮುಂಜಾನೆ ಐದಕ್ಕೆ ಎಲ್ಲರೂ ರೆಡಿ ಸವದತ್ತಿಗೆ. ಹೊರಟಿತು ಗೆಳೆಯರ ಬಳಗ, ಸಾರಂಗಿ ಮಂಜು-ಹುಳ, ಮಮ್ಮಿ ಪ್ರತಿಭಾ, ಭಾರತಿ, ಮಮತಾ ಜೊತೆಗೆ ಶಶಿ ಮತ್ತು ನಾನು. ಅಂತೂ ಬಸ್ಸೇರಿ ತಲುಪಿದೆವು ಅಮ್ಮನ ಗುಡಿ. ಅಲ್ಲಿ ಕಾಸಿದ್ದೋನೆ ಬಾಸು. ಕಾಸ್ ಕೊಟ್ಟೋನ್ ಗೆ ದರ್ಶನ ಸಲೀಸು. ಅಂತೆ ವೇಳೆ ಇಲ್ಲದೇ, ಆರು-ಮೂರು ಕಾಸಿಟ್ಟಿದ್ದ ನಾವೆಲ್ಲಾ ಸರದಿ ನಿಲ್ಲುವ ಮನಸ್ಸಿಲ್ಲದೇ ದುಡ್ಡು ಕೊಟ್ಟು ಸವದತ್ತಿ ಅಮ್ಮನ ದರ್ಶನ ಪಡೆದೆವು. ಎಲ್ಲೆಲ್ಲೂ ಕುಂಕುಮ. ಅರಿಶಿನ. ಮೈ-ಕೈ ಎಲ್ಲಾ ಅದೇ. ಭಕ್ತರು ಭಾವಪರವಷರಾಗಿದ್ರು. ದುಷ್ಟರು ದೆವ್ವ ಹಿಡಿದವರಂತೆ ಆಡ್ತಿದ್ರು. ಕಾಲಿಟ್ಟಲ್ಲೆಲ್ಲಾ ಗೊಜ್ಜೆ. ಕಾಲಬೆರಳ ಸಂದಿಯಲ್ಲಿ ಮಣ್ಣು ಎಗರಿ ಎಗರಿ ಬರುತ್ತಿತ್ತು. ಸುಂದರ ಪ್ರಕೃತಿ. ದೇವಿ ಮನೆಯಿಂದ ಬಸ್ಸಿನ ಮನೆವರೆಗೂ ಸಾಲು ಸಾಲು ಅಂಗಡಿಗಳು. , ನಿಜಕ್ಕೂ ನಮ್ಮ ಐದು ದಿನಗಳು ಅವಿಸ್ಮರಣೀಯ. ಅನಿರ್ವಚನೀಯ ಅನಿಸಿದ್ದು. ಅದು ಸಾಧನಕೇರಿಯ ಸಾರ್ಥಕತೆಯಲ್ಲಿ. ಮರೆತೆನೆಂದರೂ ಮರೆಯದ ಬೇಂದ್ರೆ ಸ್ಪರ್ಶಿಸಿದ ಸುಖ. ಅವರು ನಡೆದಾಡಿದ, ಕುಂತು-ನಿಂತು-ಉಂಡು-ಮಲಗಿ-ಎದ್ದು-ಬಿದ್ದು-ಹೊದ್ದು-ಘಮ ಘಮ್ಮಾಡಿಸಿದ ಅಕ್ಷರ ಸೇವಂತಿ ಸವಿದ ಸಂಭ್ರಮ. ಶ್ರೀಮಾತಾ ನಿಲಯದೊಳಗೆ ಅವರ ಇರುವಿಕೆಯನ್ನೂ ಪ್ರತಿಷ್ಠಾಪಿಸಿದ ಆ ಗಾಳಿ, ಅವರ ಪಾದಧೂಳಿನಿಂದ ಪಾವನಗೊಂಡ ನಮ್ಮ ಪಾದಗಳು...ಅವರ ಸುಪುತ್ರ ವಾಮನ ಬೇಂದ್ರೆಯವರೊಡನೆ ಆಡಿದ ಮಾತು, ಜ್ಞಾನಪೀಠ ಸೇರಿದಂತೆ ಹಲವು ಪ್ರಶಸ್ತಿಗಳು ನಮ್ಮ ನೋಡಿ ನೋಡಿ ಜೋರು ನಗುತ್ತಿದ್ದ ರೀತಿ, ಇಡೀ ವ್ಯವಸ್ಥೆಯನ್ನು ಅಣಕಿಸುತ್ತಿದ್ದವು. ಫೋಟೋ ಕ್ಲಿಕ್ಕಿಸಿ ಕ್ಲಿಕ್ಕಿಸಿ ಶಶಿಗೂ ಕೈ ನೋವ್ ಬಂದಿರಬೇಕು. ಆದರೆ ಬೇಂದ್ರೆಅಜ್ಜನ ಇರುವಿಕೆಯನ್ನ ನನ್ನಕ್ಷಿಪಟಲದಲ್ಲಷ್ಟೇ ಅಲ್ಲದೇ ಎಲ್ಲರ ಕಣ್ಣಿಗೂ ರಾಚುವಂತೆ ಹಿಡಿದಿಡಬೇಕೆಂಬ ಬಯಕೆಯಿಂದ ಫೋಟೋ ಕ್ಲಿಕ್ಕಿಸಿದ್ದಾಗಿತ್ತು. ಕಡೆಗೆ, ಟ್ರೈನಿಂಗ್ ಮುಗಿಯಿತು ಅನ್ನೋ ಸಮಯ ಬಂತು. ಧಾರವಾಡ ಪೇಡಾ ಭರ್ಜರಿ ಖರೀದಿ. ಅಮ್ಮನಿಗೊಂದು ಮೆಂತ್ಯ ಕಲರ್ ಸೀರೆ.. ಹುಡುಕಿ ತಡಕಿ ತೆಗೆದುಕೊಂಡಾಗಲೇ ಸಮಾಧಾನದ ನಿಟ್ಟುಸಿರು. ಹೀಗೆ ನೆನಪುಗಳ ಬುತ್ತಿ ಕಟ್ಟಿ ಹೊರಟಿತು ಹುಬ್ಬಳ್ಳಿ-ಮೈಸೂರು ರೈಲು.
ಆದರೆ ಟ್ರೈನಿಂಗ್ ಮುಗಿಸಿ ಹೊರಬರುವಾಗ ಉಳಿದಿದ್ದು ನಿಜಕ್ಕೂ ಅವಿಸ್ಮರಣೀಯ ಅನುಭವ

ಶನಿವಾರ, ಮೇ 7, 2011

ಮತ್ತದೇ ಬೇಸರ...ಮತ್ತದೇ ಸಂಜೆ...


ಆಕೆಯ ನೆನಪೇ ಇನ್ನು ಮಾಸಿಲ್ಲ. ಮರಳಲಾರದ ಶಿಲ್ಪ ಮರೆಯಾಗಿಲ್ಲ. ಆಗಲೇ ಮತ್ತೊಂದು ನೋವು. ಮತ್ತದೇ ಬೇಸರ. ಮತ್ತದೇ ಸಂಜೆ. ಮತ್ತದೇ ಏಕಾಂತ. ಅದೇಕೋ, ದೂರದ ಹತ್ತಿರದವರು, ದೂರವಾಗುತ್ತಲೇ ಇದ್ದಾರೆ. ಮೊನ್ನೆಯಷ್ಟೇ ರಜೆ ಹಾಕಿ, ಊರಿಗೆ ಹೋಗಿದ್ದೆ. ದಸರೆ ಹೆಸರಿನಲ್ಲಿ ವಿಶ್ವಕ್ಕೊಂದು ವೇದಿಕೆ ನೀಡಿದ್ದ ‘ಮೈ’ಸೂರು ಇನ್ನು ತನ್ನ ವೈಭವದಿಂದ ಹೊರಬಂದಿರಲಿಲ್ಲ. ಆ ಗತ್ತು, ಗೈರತ್ತು ನಾ ಹೋಗುವ ದಾರಿದೀಪಗಳಲ್ಲಿ, ರಸ್ತೆ ಇಕ್ಕೆಲಗಳ ಸೌಂದರ್ಯ ಕಸಿಯುವ ಬಂಟಿಂಗ್ಸ್, ಬ್ಯಾನರ್‌ಗಳಲ್ಲಿ ಪ್ರತಿಫಲಿಸುತ್ತಿತ್ತು.

ನಮ್ಮೂರು ಮಂಚನಹಳ್ಳಿ. ಕೆ.ಆರ್. ನಗರಕ್ಕೆ ೬ ಕಿಮೀ. ಮನೆಗೆ ಹೋದಾಗಲೆಲ್ಲಾ ನಮ್ಮ ಹಳ್ಳಿಗೆ ಹೋಗುವುದು, ಆ ಗದ್ದೆ, ಆ ಹಸಿರು, ನಮ್ಮ ಕೆರೆ, ಹೊಳೆಯ ದಡ, ಬೀಳಲು ಬಿಟ್ಟ ಮರಗಳು, ಮೌನದೊಳಗೇ ‘ಮಗಾ... ಮಗಾ’ ಎಂದು ಮಾತುಗಳ್ಳಬ್ಬರಿಸುವ ಅಯ್ಯ(ಅಜ್ಜ), ಅಮ್ಮ(ಅಜ್ಜಿ)ಯರ ಗುದ್ದಗಳು, ಹೋದಾಗಲೆಲ್ಲಾ ಅಲ್ಲಿ ತನಗೆ ತಾನೆ ಉದುರುವ ಕಂಬನಿ, ಆಪ್ತ ವಿಚಾರಗಳ ಸರಣಿ, ಇವೆಲ್ಲಾ ನನ್ನ ಅವಿಸ್ಮರಣೀಯ ಸಂಗತಿಗಳು. ಮತ್ತೆ ಮತ್ತೆ ಬೇಕೆನ್ನುವ ಸನ್ನಿವೇಶಗಳು. ಹಾಗೇ ಊರಿಗೆ ಹೋದೆ. ಮಾರನೆ ದಿನ. ಎದುರು ಮನೆ ಷಡಕ್ಷರಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದ ಅಂತಾ ಸುದ್ದಿ ಬಿತ್ತು. ಕಣ್ಬಟ್ಟಲಲ್ಲೇ ಅವನಿದ್ದ. ವರ್ಷವಾಗಿತ್ತಷ್ಟೇ ಅವನ ಮತ್ತು ಎದುರು ಮನೆಯ ಅಕ್ಷರಶಃ ಬಡ ಹೆಣ್ಣುಮಗಳು ಪಾಪ(ಧನಲಕ್ಷ್ಮಿ) ರಿಜಿಸ್ಟ್ರಾರ್‍ ವಿವಾಹವಾಗಿ. ತುಂಬಾ ಖುಷಿಯಾಗಿತ್ತು. ಜಾತಿ,ಕುಲ ಗೊತ್ತಿಲ್ಲದ ಹುಡುಗಿ ಕೈ ಹಿಡಿದನಲ್ಲ ಈ ಹುಡುಗ ಅಂತಾ. ೮ ತಿಂಗಳ ಮಗು ಕೂಡ ಇತ್ತು. ಗಾಡಿ ತಕ್ಕೊಂದು ಹಂಪಾಪುರಕ್ಕೆ ಹೋಗಿ, ಡಾಕ್ಟರ್ ಕರೆದು ತಂದೆ. ಆಸ್ಪತ್ರೆಗೆ ಹೋದ ಮೇಲೆ ಗುಣಮುಖನಾಗ್ತಾನೆ ಅಂದುಕೊಂಡೆ. ಆದರೆ, ಸಂಜೆಯಾಗ್ತಲೇ ಮತ್ತೆ ಸೀರಿಯಸ್ ಆಗಿ, ಮೈಸೂರಿಗೆ ಕರೆದು ಹೋಗಿದ್ದಾರೆ ಅಂತಾ ಗೋಳಿಡು ಸದ್ದು ಊರಲ್ಲೆಲ್ಲಾ ಮೊಳಗಿತ್ತು. ಅತ್ತ ಊರಿಗೆ ಹೋಗಿ ಬಂದ ನಾನು ಕೂಡಲೇ, ನಮ್ಮ ಮಿತ್ರ ಸೋಮಶೇಖರ್‍ಗೆ ರಿಂಗಣಿಸಿ, ಕೆ.ಆರ್,ಆಸ್ಪತ್ರೆ ಡಾಕ್ಟರ್‌ಗೆ ತಿಳಿಸುವಂತೆ,,ಹೀಗ್ಗೀಗೆ ಎಂದೇ...ತಕ್ಷಣವೇ ಸ್ಪಂದಿಸಿದ ಅವರು ಸಹಾಯ ಮಾಡುವುದಾಗಿ ಹೇಳಿದರು. ಆದರೆ, ಕ್ಷಣ ಹೊತ್ತಿನಲ್ಲೇ ಆಸ್ಪತ್ರೆ ತಲುಪದೇ ಇರುವ ಷಡಕ್ಷರಿ ಶರೀರ ಹೊತ್ತ ಗೂಡ್ಸ್ ಆಟೋ ಮನೆ ಮುಂದೆ ನಿಂತಿತ್ತು........

ಬೇಸರದಿಂದಲೇ ಬಸ್ ಹತ್ತಿ, ಬೇಸರದಲ್ಲೂ ಬೆಂಬಿಡದ ಬೆಂಗಳೂರು ಸೇರಿದೆ. ಆದರೆ, ಬಂದು ಶಿಫ್ಟ್ ಮುಗಿಸಿ ಮನೆಹೋಗುತ್ತಲೇ ಮತ್ತದೇ ಫೋನು ರಿಂಗಣಿಸಿತು. ‘ಜಯಮ್ಮ ನೇಣು ಹಾಕ್ಕೊಂಡು ಸತ್ತೊದ್ಲಂತೆ ಅಣ್ನಾ...’ಅಂತ ತಂಗಿ ಹೇಳಿದಾಗ ಒಂದಷ್ಟು ಕ್ಷಣ ಮೌನದ ಮೆರವಣಿಗೆ. ಆಡಿದ್ದ ಕುಂಟೆಬಿಲ್ಲೆ, ಅಮಾರೈಟ್...ಅಮಾರೈಟ್, ಬೆಟ್ಟದ ಉಣಸೆ ಹಣ್ಣಿಗಾಗಿ ಊರ ಹಿತ್ತಲುಗಳನ್ನೆಲ್ಲಾ ಸುತ್ತಿ ಹೈರಾಣಾದ ದಿನಗಳು, ಗಲ್ ಗಲ್ ಗಿರಿ ಆಡುತ್ತಾ ನಮ್ಮೂರ ಸಿನೆಮಾ ಟೆಂಟ್‌ನಿಂದಲೂ ಕುಂಟಿಸುತ್ತಾ ಬಂದ ಸಂದರ್ಭ, ತೊಪ್ಪೆಯನ್ನೇ ತುಪ್ಪವಾಗಿಸಿ...ಬೀದಿ ಬದಿ ಗಿಡಗಳನ್ನೇ ಸೊಪ್ಪು ತರಕಾರಿ ಮಾಡಿ, ನಾನೇ ತಯಾರಿಸಿದ್ದ ತಕ್ಕಡಿ ತೂಗಿ ಆಡುತ್ತಿದ್ದ ಅಂಗಡಿ-ಮನೆ ಆಟ, ಎಲ್ಲವೂ ಕಣ್ಣಮುಂದೇ ಧುತ್ತನೇ ಬಂದು ಕುಳಿತವು. ಮ್ಚೇ...ಎಂದು ಅದೆಷ್ಟು ಸಾರಿ ಹೇಳಿದವೋ ನನ್ನ ಧ್ವನ್ಯಂಗಗಳು. ಅಷ್ಟೂ ಸಾರಿಯೂ ಯಾಕೋ...ಮೌನಕಣಿವೆಗೆ ಬಿದ್ದಿತ್ತು ಮನಸು.

ಶುಕ್ರವಾರ, ಮೇ 6, 2011

ನೀರು ನಿಲುದಾಣ

'ನೀರೆ' ನಿಲುದಾಣ

ಮಾತಿಲ್ಲದ ಕಥೆ,

ಜಗದ ವ್ಯಥೆ.
ಮೌನದ ಜೊತೆ,
ಸಂಗೀತದ ಲತೆ.
ಬೆಳಕೂ ಮೆರೆಯಿತೇ,
ಜನರಲ್ಲಿರದ ನೀರವತೆ.
ಇದು ಇಂದಿನ ಕೊರತೆ.



ಟ್ರಿನ್ ............ಅಂತ ಶಬ್ದ ಮೊಳಗಿತು.    ನಮ್ಮೂರ ಟೆಂಟ್ ಪರದೆ ಮೇಲೆ ಸಿನಿಮಾ ಶುರುವಾಗ್ತಿದ್ದಂತೆಯೇ,  ಪ್ರಶಾಂತ ಪ್ರಕೃತಿಯನು ಸೀಳಿದ ಭಾವದೊಲುಮೆಗಳ ಮೇಲಾಟ. ಸದ್ದುಸುರುತ್ತಾ ಸದಾ ಹರಿವ ನೀರೇ ಹೀರೋ, ಹೀರೋಯಿನ್ ಎಲ್ಲಾನೀರಿನ ಸುತ್ತ ನೀರೆನೀರೆ ಹಿಂದೆ ನೀರವಮೌನ. ಮೌನದಲ್ಲಿ ಕಾಮಿಸುವ ಮನಸು. ಮರ್ಕಟ ಮನಸಿಗೆ ಮರುಗುವ ಜನ. ಜನರಿಂದೆ ಜನ. ಒಬ್ಬೊಬ್ಬರು ಒಂದು ತಲೆಮಾರು. 

ಅವಳೊಬ್ಬಳು. ಅದು ಬಯಲುದಾರಿಯಲ್ಲಿ ಬಸವಳಿದ ಜೀವ. ನಲ್ಲಿ ಕಂಡೊಡನೆ ಕುಳಿತಳಲ್ಲಿ. ಲೋಟದ ನೋಟಕೆ ದಾಹತಣಿಯಿತು. ಹೆಜ್ಜೆ ಅರಸಿದವು. ಅವನೊಬ್ಬ ಯಾತ್ರಿ, ದಾಹ ತಣಿಸಿಕೊಂಡು, ಕಡೆಗೆ ನೀರಿನ ಬುಡಕ್ಕೆ ಬಾಯಿಟ್ಟ. ನೀರಿದ್ದಲ್ಲಿ ನಿಂತವು ಪ್ರಾಣಿಗಳು. ಹದಿಹರೆಯಕೆ ಹರಕೆಯಂತಿದ್ದ ನವರಸಶ್ರೇಷ್ಠ ಶೃಂಗಾರದಲಿ ರಮಿಸಿದವು. ಬಟಾಬಯಲಲ್ಲಿ ಬೆತ್ತಲಾದದ್ದ ಕಂಡು, ನೋವನುಂಡು, ನಿರ್ಗಮಿಸಿದವು.

  ಮೂಲೆಯಲ್ಲಿ ತಿರುತಿರುಗಿ ಮಲಗಿ, ರವಿಯೊಡನೆ ರಸಗಳಿಗೆ ಅನುಭವಿಸಿ ಜೀವಂತ ಕಾಣುವ ಜೀವಿ. ಜಗದಾಗು ಹೋಗುಗಳ ವೀಕ್ಷಕ. ಕಣ್ಣಲ್ಲಿ ಕಂಡದ್ದು ಮುದುಕಿ. ಮಟಮಟ ಮಧ್ಯಾಹ್ನ. ಬಾಯಾರಿಕೆ. ನೀರಿನ ಕನವರಿಕೆ. ಗಂಟಲೊಳಗೆ ನೀರಿಳಿಯಿತು. ಜೀವ ಧರೆಗುರುಳಿತು. ಹಿಂದಿಂದ ಬಂದಿಬ್ಬರು ಸಾವೆಂದು ಸಾಗಿಸುತ ಮುನ್ನಡೆದರು.

 ವೇದಿಕೆಯಲಿ ನಡೆದ ನಾಟಕಕ್ಕೆಸುತ್ತ ಕತ್ತಲ ಪರದೆ. ಬಲಕೆ ಗುಡ್ಡ. ಎಡಕೆ ಗೋಡೆ. ಹಿಂಭಾಗವೊಂದು ಬೆಳ್ಳಿಪರದೆಪಕ್ಕ ಕಾಲುಹಾದಿ. ಮೇಲೆಲ್ಲಾ ಬೆಳಕಿಂಡಿಗಳು. ಆ ಬೆಳಕುಭಾವಕ್ಕೆ ಬಂಧು. ವೇದಿಕೆ ಮಧ್ಯೆ "ನಲ್ಲಿ" ಯು ಒಂದು. ನಲ್ಲಿಯೇ ನಾಟಕದ ಕೇಂದ್ರಬಿಂದು. ಒಂದೇ ನಿಲುದಾಣ, ಹಲವರ ಬದುಕಿನ-ಹಲವು ನಿಲುಗಡೆಗೆ ನಾಂದಿ ಹಾಡಿತುಬಸವಜಯಂತಿಯಂದು. ನಿನಾಸಂ ಮರುತಿರುಗಾಟದಲಿ ಪ್ರದರ್ಶನಗೊಂಡ ನಾಟಕ, ಜಂಗಮವಾಣಿಗಳ ಕಿರಿಕಿರಿ, ನೀರೆಯರ ಮಾತಿ ಝರಿಯ ನಡುwayಯೂ, way ಇಲ್ಲದೇ ಸಹೃದಯರ ಸೂರೆಗೊಂಡಿತು.

ಸೋಮವಾರ, ಮೇ 2, 2011

ನನ್ನೊಲವಿಗೆ

ನಾ ಚಿಗುರಾಗುವೆ
ಎನ್ನೊಳಗೆ ಲೀನವಾಗುವ
ಮುಂಜಾವದ ಮಂಜು
ನೀನಾಗಿ ಬರುವೆಯೆಂದು...

ನಾ ಹೂವಾಗುವೆ
ಈ ಪ್ರೀತಿ ಮಧುವ
ಹೀರ ಬರುವ ತುಂಬಿ
ನೀನಾಗಿ ಬರುವೆಯೆಂದು...
.
ನಾ ಹಣ್ಣಾಗುವೆ
ಈ ರುಚಿಯ ಸವಿಯ ಬರುವ
ಹೆಣ್ಣು ಗಿಳಿ
ನೀನಾಗಿ ಬರುವೆಯೆಂದು...

ನಾ ಮರವಾಗುವೆ
ಎನ್ನಪ್ಪಿ ಬೆಳೆವ
ಲಲಿತ ಲತೆ
ನೀನಾಗಿ ಬರುವೆಯೆಂದು...

ನಾ ಮರದ ಕೊಳಲಾಗುವೆ
ಒಳಗಣ್ಣಿನಿಂದುಸುರಿ ಬರುವ
ಸ್ವರ ನಿನಾದವಾಗಿ
ನೀ ಕಾಣ ಬರುವೆಯೆಂದು....

ನಾ ನಿರುಳ ಶಶಿಯಾಗುವೆ
ನೀ ನಭದಿ ಮಿನುಗುವ
ಧೃವತಾರೆಯಾಗಿ
ಕಾಣಬರುವೆಯೆಂದು.....

ನಾ ನಾನಾಗುವೆ
ನೀ ನೀನಾಗಿ
ಎನ್ನೆದೆಬಡಿತದ ತಾಳವಾಗಿ
ಇರುವೆಯೆಂದು..ಎಂದೆಂದೂ....